ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (ಕ.ಕ.ರ.ಸಾ.) ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಇಂದು ವಿಜಯಪುರದಲ್ಲಿ 112 ನೂತನ ನಗರ ಸಾರಿಗೆ ಬಸ್ಗಳಿಗೆ ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಪ್ರಸಕ್ತ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಒಟ್ಟು 400 ಹೊಸ ಬಸ್ಗಳನ್ನು ಸೇರ್ಪಡೆಗೊಳಿಸಲು ಈಗಾಗಲೇ ಕಾರ್ಯಾದೇಶ ನೀಡಲಾಗಿದೆ ಎಂದು ತಿಳಿಸಿದರು. ಇಂದು ಚಾಲನೆ ನೀಡಲಾದ 112 ಬಸ್ಗಳನ್ನು ನಗರ ಭೂ ಸಾರಿಗೆ ನಿರ್ದೇಶನಾಲಯ (Directorate of Urban Land Transport – DULT) ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಯೋಜನೆಯಡಿ ಸೇರ್ಪಡೆ ಮಾಡಲಾಗಿದೆ.

ಈ ನೂತನ ಬಸ್ಗಳನ್ನು ವಿಜಯಪುರ ವಿಭಾಗಕ್ಕೆ 27, ವಿಜಯನಗರಕ್ಕೆ 25, ಕಲಬುರಗಿಗೆ 25, ರಾಯಚೂರಿಗೆ 18, ಬಳ್ಳಾರಿಗೆ 10, ಬೀದರಕ್ಕೆ 4 ಮತ್ತು ಯಾದಗಿರಿಗೆ 3ರಂತೆ ಹಂಚಿಕೆ ಮಾಡಲಾಗಿದೆ. ಇದೇ ಯೋಜನೆಯಡಿ ಮುಂದಿನ ದಿನಗಳಲ್ಲಿ ಸೇರ್ಪಡೆಗೊಳ್ಳಲಿರುವ ಇನ್ನೂ 30 ಬಸ್ಗಳನ್ನು ಅಗತ್ಯವಿರುವ ವಿಭಾಗಗಳಿಗೆ ನಿಯೋಜಿಸಲು ಮಾನ್ಯ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ತೀರ್ಮಾನಿಸುವಂತೆ ಸಚಿವರು ಸೂಚನೆ ನೀಡಿದ್ದಾರೆ.
ಇದಲ್ಲದೆ, ಕಲ್ಯಾಣ ಕರ್ನಾಟಕ ಭಾಗಕ್ಕೆ 56 ಪ್ರತಿಷ್ಠಿತ ಬಸ್ಗಳನ್ನು ಸೇರ್ಪಡೆಗೊಳಿಸಲು ಕಾರ್ಯಾದೇಶ ನೀಡಲಾಗಿದ್ದು, ಇದರಲ್ಲಿ 20 ಎಸಿ ಸ್ಲೀಪರ್, 20 ನಾನ್ ಎಸಿ ಸ್ಲೀಪರ್ ಮತ್ತು 16 ಎಸಿ ಸೀಟರ್ ಬಸ್ಗಳು ಸೇರಿವೆ. ಜೊತೆಗೆ ಕ.ಕ.ರ.ಸಾ. ನಿಗಮಕ್ಕೆ ಹೊಸದಾಗಿ 225 ವಿದ್ಯುತ್ ಚಾಲಿತ ಬಸ್ಗಳನ್ನು ಸೇರಿಸಲಾಗುತ್ತಿದ್ದು, ಕಲಬುರಗಿ ಜಿಲ್ಲೆಗೆ 100, ವಿಜಯಪುರ ಜಿಲ್ಲೆಗೆ 75 ಮತ್ತು ಬಳ್ಳಾರಿಗೆ 50 ಬಸ್ಗಳನ್ನು ನೀಡಲು ತೀರ್ಮಾನಿಸಲಾಗಿದೆ.

ವಿಜಯಪುರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವರಾದ ಎಂ.ಬಿ. ಪಾಟೀಲ್, ವಿಜಯಪುರ ಶಾಸಕ ಬಸನಗೌಡ ಆರ್. ಪಾಟೀಲ್ ಯತ್ನಾಳ್, ನಾಗಠಾಣ ಶಾಸಕ ಕಟಕದೊಂಡ ವಿಠ್ಠಲ, ಕ.ಕ.ರ.ಸಾ. ನಿಗಮದ ಅಧ್ಯಕ್ಷ ಅರುಣ್ ಕುಮಾರ್ ಎಂ.ವೈ. ಪಾಟೀಲ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ಸುಶೀಲ ಭಾಸೇ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಈ ನೂತನ ಬಸ್ಗಳ ಸೇರ್ಪಡೆಯಿಂದ ಕಲ್ಯಾಣ ಕರ್ನಾಟಕ ಭಾಗದ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಮಹತ್ವದ ಬಲ ದೊರೆಯಲಿದ್ದು, ಪ್ರಯಾಣಿಕರಿಗೆ ಉತ್ತಮ ಹಾಗೂ ಸುಲಭ ಸೇವೆ ಲಭ್ಯವಾಗಲಿದೆ.




Post Comment