×

ನಗರ ಸ್ವಚ್ಛತೆಗೆ ಹೊಸ ದಿಕ್ಕು ತೋರಿದ ಕೋರಮಂಗಲ ಕಸ–ರಸ ಕೇಂದ್ರ

ಬೆಂಗಳೂರು:
ಪ್ರತಿಯೊಂದು ಕ್ಷೇತ್ರಕ್ಕೂ ರಾಮಲಿಂಗಾ ರೆಡ್ಡಿ ಅವರಂತಹ ಜನಪ್ರತಿನಿಧಿ ದೊರೆತರೆ ಆ ಕ್ಷೇತ್ರ ಸರ್ವಾಂಗೀಣ ಅಭಿವೃದ್ಧಿಯ ದಿಕ್ಕಿನಲ್ಲಿ ವೇಗವಾಗಿ ಮುನ್ನಡೆಯುವುದು ನಿಶ್ಚಿತ ಎಂಬುದಕ್ಕೆ ಬಿ.ಟಿ.ಎಂ ವಿಧಾನಸಭಾ ಕ್ಷೇತ್ರದ ಕೋರಮಂಗಲದಲ್ಲಿರುವ ಕಸ–ರಸ ಕೇಂದ್ರ ಜೀವಂತ ಉದಾಹರಣೆಯಾಗಿದೆ.

ಬಿ.ಟಿ.ಎಂ ವಿಧಾನಸಭಾ ಕ್ಷೇತ್ರದಲ್ಲಿ Solid Waste Management (ಘನ ತ್ಯಾಜ್ಯ ನಿರ್ವಹಣೆ) ಉಪಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳಿಸಿ, ಇಂದು ಈ ಕ್ಷೇತ್ರವನ್ನು ದೇಶದ ಮಟ್ಟದಲ್ಲಿ ಮಾದರಿ ಕ್ಷೇತ್ರವೆಂದು ಪರಿಗಣಿಸಲಾಗುತ್ತಿದೆ. ಈ ಸಾಧನೆಯ ಹಿಂದಿರುವ ಪ್ರಮುಖ ಶಕ್ತಿ ಕ್ಷೇತ್ರದ ಶಾಸಕರೂ ಹಾಗೂ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ ಅವರ ದೂರದೃಷ್ಟಿಯ ನಾಯಕತ್ವವಾಗಿದೆ.

ಕೋರಮಂಗಲದ ಕಸ–ರಸ ಕೇಂದ್ರವು ತ್ಯಾಜ್ಯ ಸಂಸ್ಕರಣಾ ಸಾಮರ್ಥ್ಯ ಹೊಂದಿದ ವಿಕೇಂದ್ರಿತ ವ್ಯವಸ್ಥೆಯನ್ನು ಸ್ಥಾಪಿಸುವ ಕನಸಿನ ಫಲವಾಗಿದೆ. ಸಚಿವ ರಾಮಲಿಂಗಾ ರೆಡ್ಡಿ ಅವರ ಸ್ಪಷ್ಟ ದೃಷ್ಟಿ, ಅಗತ್ಯ ಅನುದಾನಗಳ ಸಮರ್ಪಕ ವ್ಯವಸ್ಥೆ ಹಾಗೂ ನಾಗರಿಕರನ್ನು ಜೊತೆಯಾಗಿ ಕರೆದುಕೊಂಡು ಹೋಗುವ ಅವರ ಕಾರ್ಯಶೈಲಿಯಿಂದಾಗಿ, ಇಂದು ಇಲ್ಲಿ ವಿಶ್ವಮಟ್ಟದ ಹಾಗೂ ಪ್ರಶಸ್ತಿ ವಿಜೇತ ತ್ಯಾಜ್ಯ ಸಂಸ್ಕರಣಾ ಕೇಂದ್ರ ಅಸ್ತಿತ್ವಕ್ಕೆ ಬಂದಿದೆ.

ಈ ಕೇಂದ್ರದಲ್ಲಿ ಐದು ವಿಧದ ತ್ಯಾಜ್ಯ ಹರಿವುಗಳನ್ನು ವೈಜ್ಞಾನಿಕವಾಗಿ ಸಂಸ್ಕರಿಸಲಾಗುತ್ತಿದ್ದು, ತ್ಯಾಜ್ಯ ನಿರ್ವಹಣೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ “ಕಲಿಕೆಯ ಕೇಂದ್ರ”ವನ್ನು ಸ್ಥಾಪಿಸುವ ಕಾರ್ಯ ಪ್ರಗತಿಯಲ್ಲಿದೆ.

ಪ್ರತಿದಿನ ಸುಮಾರು 15 ಟನ್ ಸಸ್ಯ ಹಸಿ ತ್ಯಾಜ್ಯವನ್ನು ಅನೈರಾಬಿಕ್ ವಿಧಾನದಲ್ಲಿ ಸಂಸ್ಕರಿಸಿ, ಅದನ್ನು ಬಯೋ–ಸಿಎನ್‌ಜಿಯಾಗಿ ಪರಿವರ್ತಿಸಲಾಗುತ್ತಿದೆ. ಈ ಬಯೋ ಇಂಧನವನ್ನು ಪೈಪ್ ಮೂಲಕ ಹೋಟೆಲ್‌ಗಳು ಹಾಗೂ ರೆಸ್ಟೋರೆಂಟ್‌ಗಳಿಗೆ ಪೂರೈಸಲಾಗುತ್ತಿದ್ದು, ಪರಿಸರ ಸ್ನೇಹಿ ಇಂಧನ ಬಳಕೆಗೆ ಇದು ಮಹತ್ವದ ಕೊಡುಗೆಯಾಗಿದೆ.
ಇಲ್ಲಿರುವ ದೊಡ್ಡ ಮಟ್ಟದ ಒಣ ತ್ಯಾಜ್ಯ ಸಂಗ್ರಹ ಮತ್ತು ವರ್ಗೀಕರಣ ಕೇಂದ್ರ (DWCC) ಪ್ರತಿದಿನ ಸುಮಾರು 1 ಟನ್ ಒಣ ತ್ಯಾಜ್ಯವನ್ನು ಸ್ವೀಕರಿಸಿ, ವಿಂಗಡನೆ ಹಾಗೂ ಮರುಬಳಕೆಗೆ ಒಳಪಡಿಸುತ್ತಿದೆ. ಇತ್ತೀಚೆಗೆ ನವೀಕರಿಸಲಾದ ವಿಶಾಲ ಥರ್ಮೋಕೋಲ್ ಮತ್ತು ಮೆಟ್ರೆಸ್‌ಗಳ ಸಂಗ್ರಹ ಹಾಗೂ ಪ್ರಾಥಮಿಕ ಸಂಸ್ಕರಣಾ ಕೇಂದ್ರವು ದಿನಕ್ಕೆ 1 ಟನ್‌ಗಿಂತ ಹೆಚ್ಚಿನ ತ್ಯಾಜ್ಯವನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದು, ಇದು ತನ್ನದೇ ಆದ ವಿಶಿಷ್ಟತೆಯನ್ನು ಪಡೆದಿದೆ.

ಇದರ ಜೊತೆಗೆ, ವೈಜ್ಞಾನಿಕ ಹಾಗೂ ಸ್ವಚ್ಛ ವಿಧಾನದಲ್ಲಿ ಪ್ರತ್ಯೇಕಗೊಂಡ ಹಸಿ ತ್ಯಾಜ್ಯವನ್ನು ಸ್ಥಳಾಂತರಿಸುವ ಟ್ರಾನ್ಸ್‌ಫರ್ ಸ್ಟೇಷನ್ ಕಾರ್ಯನಿರ್ವಹಿಸುತ್ತಿದ್ದು, ದಿನಕ್ಕೆ ಸುಮಾರು 5 ಟನ್ ತ್ಯಾಜ್ಯವನ್ನು ಸಂಸ್ಕರಿಸುತ್ತದೆ. ಮತ್ತೊಂದು ಅತ್ಯಾಧುನಿಕ ಒಣ ತ್ಯಾಜ್ಯ ಸಂಗ್ರಹ ಕೇಂದ್ರ (DWCC) ಶೀಘ್ರದಲ್ಲೇ ರಾಜ್ಯಮಟ್ಟದ ಮಾದರಿ ಕೇಂದ್ರವಾಗಿ ಕಾರ್ಯಾರಂಭ ಮಾಡಲಿದೆ.

ತ್ಯಾಜ್ಯ ನಿರ್ವಹಣೆ ಕುರಿತು ನಗರದ ಎಲ್ಲಾ ವರ್ಗದ ಜನರಿಗೆ ಶಿಕ್ಷಣ ನೀಡುವ ಉದ್ದೇಶದಿಂದ “ಕಲಿಕೆಯ ಕೇಂದ್ರ”ವನ್ನು ಇಲ್ಲಿ ಸ್ಥಾಪಿಸಲಾಗುತ್ತಿದ್ದು, ಇದು ಪರಿಸರ ಜಾಗೃತಿಗೆ ಮಹತ್ವದ ವೇದಿಕೆಯಾಗಲಿದೆ.
ಒಟ್ಟಾರೆ, ಕೋರಮಂಗಲದ ಕಸ–ರಸ ಕೇಂದ್ರವು ಬೆಂಗಳೂರಿಗೆ ಮಾತ್ರವಲ್ಲದೆ ದೇಶದಾದ್ಯಂತ ಅನುಕರಿಸಬಹುದಾದ, ವಿಶಿಷ್ಟ ಹಾಗೂ ಪರಿಣಾಮಕಾರಿ ವಿಕೇಂದ್ರಿತ ತ್ಯಾಜ್ಯ ನಿರ್ವಹಣಾ ಮಾದರಿಯಾಗಿ ಹೊರಹೊಮ್ಮಿದೆ. ಬೆಂಗಳೂರು ನಗರದ ಅನೇಕ ಜನಪ್ರತಿನಿಧಿಗಳು, Solid Waste Management ಕ್ಷೇತ್ರದ ಎನ್‌ಜಿಓಗಳು ಹಾಗೂ ಪರಿಸರವಾದಿಗಳು ಈಗಾಗಲೇ ಈ ಕೇಂದ್ರಕ್ಕೆ ಭೇಟಿ ನೀಡಿ, ಈ ಉಪಕ್ರಮವನ್ನು ಶ್ಲಾಘಿಸಿ, ಇದೇ ಮಾದರಿಯನ್ನು ತಮ್ಮ ಕ್ಷೇತ್ರಗಳಲ್ಲಿ ಅಳವಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದ್ದಾರೆ.

Voice of Karnataka is a premier Kannada news portal dedicated to delivering timely and relevant news to our readers. Under the leadership of News Editor Irfan Uppinangady, we focus on providing in-depth coverage and diverse perspectives on local, national, and global issues. Committed to integrity and excellence in journalism, we strive to be the voice of the community, keeping our audience informed and engaged.

Post Comment

You May Have Missed