ಬಿಜೆಪಿ ರಾಜ್ಯಗಳಲ್ಲಿ ಹೆಸರು ಬದಲಾವಣೆಗೆ ಬೆಂಬಲ, ಕರ್ನಾಟಕದಲ್ಲಿ ಮಾತ್ರ ವಿರೋಧ ಏಕೆ?; ಸಚಿವರ ಪ್ರಶ್ನೆ
ಬೆಂಗಳೂರು: ಬಿ.ಜೆ.ಪಿ ಅವರ ಹೊಟ್ಟೆ ಉರಿಗೆ ಯಾವುದೇ ಮದ್ದಿಲ್ಲ. ಅಭಿವೃದ್ಧಿ ಬದಲು ರಾಜಕಾರಣ ಮಾಡುವುದರಲ್ಲಿಯೇ ಕಾಲಹರಣ ಮಾಡುತ್ತಾ, ಇಲ್ಲಸಲ್ಲದ ಅಪಪ್ರಚಾರ ಮಾಡಿ ಪ್ರಚಾರ ಪಡೆಯುವ ಕೀಳು ಅಭಿರುಚಿ ಅವರದ್ದಾಗಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಕಿಡಿಕಾರಿದ್ದಾರೆ.
ಶ್ರೀ ರಾಮಚಂದ್ರರ ಹೆಸರಿರುವ ರಾಮನಗರ ತಾಲ್ಲೂಕು ರಾಮನಗರ ತಾಲ್ಲೂಕಾಗಿಯೇ ಉಳಿಯುತ್ತದೆ. ಇದು ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾ ಕೇಂದ್ರ ರಾಮನಗರವೆಂದೇ ಇನ್ನು ಮುಂದೆಯೂ ಕರೆಯಲ್ಪಡುತ್ತದೆ. ಇಂದು ಬೆಂಗಳೂರು ನಗರವು ವಿಶ್ವಭೂಪಟದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಲು ಕಾರಣರಾದ,ಇಂದು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರದ ನಿರ್ಮಾತೃ ಶ್ರೀಮಾನ್ ಕೆಂಪೇಗೌಡರು ಹೆಸರಿಸಿದ ಬೆಂಗಳೂರು ನಗರದ ಹೆಸರನ್ನು ಈ ಹಿಂದೆ ಬೆಂಗಳೂರು ಜಿಲ್ಲೆಯಲ್ಲಿಯೇ ಒಂದಾಗಿದ್ದ ಜಿಲ್ಲೆಗೆ, ನಾಮಕರಣ ಮಾಡಿ, ಆ ಜಿಲ್ಲೆಯನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುವ ಸಂಕಲ್ಪ ನಮ್ಮ ಸರ್ಕಾರದ್ದಾಗಿದ್ದರೆ ಅದಕ್ಕೆ ಏಕೆ ಅಡ್ಡಗಾಲು? ಅಂದರೆ ನೀವು ಶ್ರೀಮಾನ್ ಕೆಂಪೇಗೌಡರು ನಾಮಕರಣ ಮಾಡಿರುವ ಬೆಂಗಳೂರು ಹೆಸರಿನ ವಿರೋಧಿಯೇ? ಎಂದು ಸಚಿವರು ಪ್ರಶ್ನಿಸಿದ್ದಾರೆ.
ಈಗಿನ ರಾಮನಗರ ಜಿಲ್ಲೆ ಹಿಂದಿನ ಬೆಂಗಳೂರು ನಗರ ಜಿಲ್ಲೆಯ ಅವಿಭಾಜ್ಯ ಅಂಗವಾಗಿತ್ತು ಎಂಬುದನ್ನು ಬಿ.ಜೆ.ಪಿ ಅವರು ಸ್ಬಲ್ಪ ಇತಿಹಾಸದ ಪುಟಗಳನ್ನು ತೆರೆದು ಓದಿದರೆ ಅರ್ಥವಾಗುತ್ತದೆ. ರಾಮನಗರ ಬೆಂಗಳೂರು ಜಿಲ್ಲೆಯಲ್ಲಿಯೇ ಇತ್ತು, ನಂತರ ಬೆಂಗಳೂರು ಗ್ರಾಮಾಂತರವೆಂದು, ತದ ನಂತರ ರಾಮನಗರವೆಂದು ಮರು ನಾಮಕರಣವಾಯಿತು. ಬಿ.ಜೆ.ಪಿ ಆಡಳಿತವಿರುವ ರಾಜ್ಯಗಳಲ್ಲಿ ಗುಜರಾತ್ ಅಹಮದಾಬಾದ್ ನಲ್ಲಿನ ಹೆಸರಾಂತ ಮೊಟೇರಾ ಸರದಾರ್ ವಲ್ಲಭಬಾಯಿ ಪಟೇಲ್ ( ಸ್ವಾತಂತ್ರ್ಯ ಹೋರಾಟಗಾರರಾದ ಧೀಮಂತ ನಾಯಕ) ಸ್ಟೇಡಿಯಂ ಅನ್ನು ನರೇಂದ್ರ ಮೋದಿ ಸ್ಟೇಡಿಯಂ ಎಂದು ಮರುನಾಮಕರಣ ಮಾಡಿದರು.
ಉತ್ತರ ಪ್ರದೇಶ ದ
1.ಅಲಹಾಬಾದ್ – ಪ್ರಯಾಗ್ ರಾಜ್ ,
2.ಫೈಜಾಬಾದ್-ಅಯೋಧ್ಯ
3.ಮುಸ್ತಫಾಬಾದ್- ರಾಂಪುರ ಅದೇ ರೀತಿ *ಮಹಾರಾಷ್ಟ್ರ* ದಲ್ಲಿ
4.. ಔರಂಗಾಬಾದ್ – ಛತ್ರಪತಿ ಸಾಂಬಾಜಿ ನಗರ
5.ಒಸಮಾನಾಬಾದ್ – ಧರ್ಶಿವ್
6.ಅಹಮದ್ನಗರ- ಅಹಲ್ಯಾನಗರ
7.*ಬಿಹಾರ* ದ ಗಯಾ – ಗಯಾ ಜೀ ಎಂದು ಊರುಗಳ ಹೆಸರುಗಳ ಬದಲಾವಣೆ ಹಾಗೂ
ದೆಹಲಿಯ ರಸ್ತೆಗಳ ಹೆಸರುಗಳ ಮರುನಾಮಕರಣ, ಈ ರೀತಿ ಬಿ.ಜೆ.ಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಮರುಹೆಸರಿಸುವ ಊರು/ ರಸ್ತೆಗಳ ಬಹುದೊಡ್ಡ ಪಟ್ಟಿಯೇ ಇದೆ. ಆಗೆಲ್ಲಾ ಅಬ್ಬರಿಸಿ ಬೊಬ್ಬಿರಿದು ಪ್ರಚಾರ ಪಡೆದ ಬಿ.ಜೆ.ಪಿ ಅವರಿಗೆ ನಮ್ಮ ಕರ್ನಾಟಕ ರಾಜ್ಯದ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ನಾಮಕರಣ ಮಾಡಿದ್ದನ್ನು ಸಹಿಸಲಾಗುತ್ತಿಲ್ಲವಲ್ಲ ಎಂಬುದೇ ದುಃಖಕರ ಸಂಗತಿ ಎಂದು ರಾಮಲಿಂಗಾ ರೆಡ್ಡಿ ವ್ಯಂಗ್ಯ ವಾಡಿದ್ದಾರೆ.
ಬಿ.ಜೆ.ಪಿ ಅವರಿಗೆ ಸೈದ್ಧಾಂತಿಕ ನೆಲೆಯಲ್ಲಿ ರಾಜಕಾರಣ ಮಾಡುವ ಯಾವುದೇ ವಿಷಯ ವಸ್ತುಗಳು ಬೇಕಾಗಿಲ್ಲ, ಅಪಪ್ರಚಾರವೇ ಅವರ ಪ್ರಚಾರದ ವಸ್ತು ವಿಷಯ ಎಂದು ಸಚಿವರು ವಾಗ್ದಾಳಿ ನಡೆಸಿದ್ದಾರೆ.
Post Comment