ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ,
ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ಬೃಹತ್ ಸಮಾವೇಶ
ಬೆಂಗಳೂರು: ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ,
ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ಸಮಾವೇಶ ಇತ್ತೀಚೆಗೆ ನಡೆಯಿತು. ಈ ಒಕ್ಕೂಟದ ನೇತೃತ್ವದಲ್ಲಿ ಕರ್ನಾಟಕ ರಾಜ್ಯದ ಎ, ಬಿ ಮತ್ತು ಸಿ ವರ್ಗದ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರ್ಚಕರ, ಆಗಮಿಕರ ಹಾಗೂ ಉಪಾಧಿವಂತರುಗಳ ಕಷ್ಟ ಕಾರ್ಪಣ್ಯಗಳಿಗಾಗಿ ಅವರ ದುಃಖ ದುಮ್ಮಾನಗಳಿಗೆ ಸ್ಪಂದಿಸಿ ಅವರ ಏಳಿಗೆಗಾಗಿ ಸುಮಾರು 50 ವರ್ಷಗಳಿಂದ ಸರ್ಕಾರದೊಡನೆ ಹೋರಾಡುತ್ತಿರುವ ಹಿಂದು ಧಾರ್ಮಿಕ ಸರ್ವ ಸಮಾಜದ ದೇವಾಲಯಗಳ ನೌಕರರನ್ನು ಒಳಗೊಂಡಿರುವ ಸಂಸ್ಥೆಯಾಗಿರುತ್ತದೆ. ನೆನ್ನೆಯ ಸಮಾವೇಶದಲ್ಲಿ ರಾಜ್ಯದ ಹಲವು ಜಿಲ್ಲೆಗಳಿಂದ ಆಗಮಿಸಿದ್ದ ಅರ್ಚಕರುಗಳು ನೆರೆದಿದ್ದರು.

ರಾಮಲಿಂಗಾ ರೆಡ್ಡಿಯವರಿಗೆ ಯಾವುದೇ ಖಾತೆ ನೀಡಲಿ ಆದರೆ ಮುಜರಾಯಿ ಖಾತೆಯೂ ಆ ಖಾತೆಯೊಂದಿಗೆ ಇರಬೇಕು ಇನ್ನು ಕನಿಷ್ಠ 10 ವರ್ಷಗಳ ಅವಧಿಗೆ ರಾಮಲಿಂಗಾ ರೆಡ್ಡಿ ಅವರು ಮುಜರಾಯಿ ಸಚಿವರಾಗಿರಬೇಕು ಇದು ನಮ್ಮ ಅಭಿಲಾಷೆ ಹಾಗೂ ಕೂಗು ಎಂದು ಅರ್ಚಕರ ಸಮಾವೇಶದಲ್ಲಿ ಬೇಡಿಕೆ ಇಡಲಾಯಿತು.

ಯಾವುದೇ ಕಾರಣಕ್ಕೂ ಮುಜರಾಯಿ ದೇವಸ್ಥಾನಗಳನ್ನು ಖಾಸಗೀಕರಣಗೊಳಿಸಬಾರದು ಅಥವಾ ಖಾಸಗಿಯವರಿಗೆ ನೀಡಬಾರದು. ಅದಕ್ಕೆ ನಮ್ಮ ವಿರೋಧವಿದೆ. ಖಾಸಗಿಯವರು ವ್ಯಾಪಾರದ ದೃಷ್ಟಿಯಿಂದ ಅಷ್ಟೇ ದೇವಸ್ಥಾನವನ್ನು ನೋಡುತ್ತಾರೆ. ಧರ್ಮವನ್ನು ಉಳಿಸುವ ಅಥವಾ ದೇವರ ಸೇವೆಯನ್ನು ಮಾಡುವ ನಮ್ಮಂತಹ ಅರ್ಚಕರ ಬಗ್ಗೆ ಅವರಿಗೆ ಯಾವುದೇ ಕನಿಕರವಿರುವುದಿಲ್ಲ. ನಮಗಾಗಿ ಯಾವುದೇ ಯೋಜನೆಗಳನ್ನು ತರುವ ಪ್ರಯತ್ನ ಕೂಡ ನಡೆಯುವುದಿಲ್ಲ. ರಾಜ್ಯದಲ್ಲಿರುವ 34,564 ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ದೇವಾಲಯಗಳಲ್ಲಿ, 34,166 ಸಿ ವರ್ಗದ ದೇವಾಲಯಗಳಿದ್ದು, ಮಾನ್ಯ ರಾಜ್ಯಪಾಲರು ಕಾಯ್ದೆಗೆ ಅನುಮೋದನೆ ನೀಡಿದ ಕೂಡಲೇ ಸಾಮಾನ್ಯ ಸಂಗ್ರಹಣಾ ನಿಧಿಯನ್ನು ಈ ದೇವಾಲಯಗಳ ಅಭಿವೃದ್ದಿ ಹಾಗೂ ಅರ್ಚಕರುಗಳ ಕ್ಷೇಮಾಭಿವೃದ್ದಿಗೆ ಹಣ ವಿನಿಯೋಗಿಸಲು ತುಂಬಾ ಅನುಕೂಲವಾಗುತ್ತದೆ ಎಂದು ಸಮಾವೇಶದಲ್ಲಿ ನಿರ್ಣಯಿಸಲಾಯಿತು.

ಈವರೆಗೆ ಬಡ ಅರ್ಚಕರುಗಳ ಬಗ್ಗೆ ಯಾರೋಬ್ಬರೂ ಕಾಳಜಿವಹಿಸಿರಲಿಲ್ಲ. ರಾಮಲಿಂಗಾ ರೆಡ್ಡಿ ಅವರ ದೂರದೃಷ್ಟಿ ಹಾಗೂ ಕಾಳಜಿ ಪರ ನಡೆಯು ಫಲವಾಗಿ ಮಸೂದೆಯು ನಮಗೊಂದು ಭರವಸೆ ಮೂಡಿಸಿದೆ. ರಾಜ್ಯಪಾಲರು ಮಸೂದೆಗೆ ಅಂಕಿತ ಹಾಕದಿರುವುದು ನಮ್ಮಂತಹ ಸಹಸ್ರಾರು ಅರ್ಚಕರು/ನೌಕರರ ಪಾಲಿಗೆ ನೋವುಂಟು ಮಾಡಿದೆ. ವಿರೋಧ ಪಕ್ಷದವರಾದ ಬಿ.ಜೆ.ಪಿ ಅವರು ಹಿಂದೂ ಧರ್ಮವನ್ನು ಉಳಿಸುವವರು ನಾವು ಎಂದು ಬಡಾಯಿ ಕೊಚ್ಚಿಕೊಳ್ಳುವುದನ್ನು ಬಿಟ್ಟು ದೇವಸ್ಥಾನ ಅಲ್ಲಿನ ಅರ್ಚಕರ ಉಳಿತಿಗಾಗಿ ತಂದಿರುವ ಈ ಕಾಯಿದೆಯನ್ನು ಬೆಂಬಲಿಸುವಂತಹ ಕಾರ್ಯಮಾಡಬೇಕು. ಪಕ್ಷ ಯಾವುದೇ ಇರಲಿ ಧರ್ಮ, ದೇವಸ್ಥಾನ, ಭಕ್ತಾದಿಗಳ ಭಾವನೆಯೊಂದಿಗೆ ರಾಜಕೀಯ ಬೆರಸಬಾರದು ಎಂದು ಬಿ.ಜೆ.ಪಿ ಅವರಲ್ಲಿ ಮನವಿ ಮಾಡಿದರು.
ರಾಜ್ಯಪಾಲರು ಶೀಘ್ರದಲ್ಲಿಯೇ ಸದರಿ ಮಸೂದೆಗೆ ಅಂಕಿತ ಹಾಕುವ ಭರವಸೆ ಇದೆ ಎಂದು ತಿಳಿಸಿದರು.
ಈ ಸಮಾವೇಶದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಸಚಿವರಾದ ಜಿ.ಪರಮೇಶ್ವರ್, ಎಚ್.ಎಂ.ರೇವಣ್ಣ, ದಿನೇಶ್ ಗುಂಡೂರಾವ್ರವರು, ರಾಜ್ಯಾಧ್ಯಕ್ಷರಾದ ಫೊ. ರಾಧಾಕೃಷ್ಣ ಕೆ.ಇ., ಗೌರವ ಪ್ರಧಾನ ಸಲಹೆಗಾರರು, ಡಾ. ಎಸ್.ಆರ್. ಶೇಷಾದ್ರಿ, ಭಟ್ಟರ್, ಗೌರವ ಉಪಾಧ್ಯಕ್ಷರು, ಡಾ. ಕೆ.ಎಸ್.ಎನ್. ದೀಕ್ಷಿತ್, ಮುಖ್ಯ ಪ್ರಧಾನ ಕಾರ್ಯದರ್ಶಿ, ಟಿ.ಕೆ. ಶಾಮಸುಂದರ್, ದೀಕ್ಷಿತ್, ಸಹ ಕಾರ್ಯದರ್ಶಿ ಕೆ.ಎಸ್. ಉಮೇಶ್ ಶರ್ಮ, ಸಂಘಟನಾ ಕಾರ್ಯದರ್ಶಿ ಹೆಚ್.ಎಸ್. ರಂಗರಾಜನ್, ಸಂಘಟನಾ ಕಾರ್ಯದರ್ಶಿ ಉಪಸ್ಥಿತರಿದ್ದರು.
Post Comment