ಕನ್ನಡ ಭಾಷೆ ಮತ್ತು ಹಕ್ಕು ರಕ್ಷಣೆಗೆ ನೆ. ಲ. ರಾಮ್ ಪ್ರಸಾದ್ ನೇತೃತ್ವದ ನೂತನ ಸಂಘಟನೆ
ಬೆಂಗಳೂರು: ಸಮಾನ ಮನಸ್ಕರರ ನೂತನ ಕನ್ನಡಪರ ಸಂಘಟನೆಯ ಲೋಕಾರ್ಪಣ ಕಾರ್ಯಕ್ರಮವು ಇಂದು ಮಲ್ಲೇಶ್ವರಂನ ಸುವರ್ಣ ಭವನದಲ್ಲಿ ಯಶಸ್ವಿಯಾಗಿ ನಡೆಯಿತು. ಬೆಳಗ್ಗೆ 9:30ಕ್ಕೆ ಆರಂಭವಾದ ಈ ಕಾರ್ಯಕ್ರಮಕ್ಕೆ ವಿವಿಧ ಕ್ಷೇತ್ರಗಳ ಗಣ್ಯರು, ಕನ್ನಡಪರ ಹೋರಾಟಗಾರರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ನೂತನ ಕನ್ನಡ ಸಂಘಟನೆ ‘ಯುವ ಕನ್ನಡಿಗರ ಸೇನೆ’ಯನ್ನು ಅಧಿಕೃತವಾಗಿ ಘೋಷಣೆ ಮಾಡಲಾಯಿತು. ಸಂಘಟನೆಯ ನೇತೃತ್ವವನ್ನು ನೆ. ಲ. ರಾಮ್ ಪ್ರಸಾದ್ ಅವರು ವಹಿಸಿಕೊಂಡಿದ್ದು, ರಾಜ್ಯಾದ್ಯಂತ ಕನ್ನಡ ಭಾಷೆ, ಸಂಸ್ಕೃತಿ, ನೆಲ-ಜಲ ಹಾಗೂ ಕನ್ನಡಿಗರ ಹಕ್ಕುಗಳ ರಕ್ಷಣೆಗೆ ಸಂಘಟಿತ ಹೋರಾಟ ನಡೆಸುವ ಉದ್ದೇಶವನ್ನು ಅವರು ಸ್ಪಷ್ಟಪಡಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ರಾಮ್ ಪ್ರಸಾದ್ ಅವರು,
“ಕನ್ನಡನಾಡಿನಲ್ಲಿ ಕನ್ನಡಿಗರು ಗೌರವದಿಂದ ಬದುಕಬೇಕು. ಯುವ ಶಕ್ತಿಯನ್ನು ಒಗ್ಗೂಡಿಸಿ ಕನ್ನಡಪರ ಚಟುವಟಿಕೆಗಳಿಗೆ ಹೊಸ ದಿಕ್ಕು ನೀಡುವುದು ಯುವ ಕನ್ನಡಿಗರ ಸೇನೆಯ ಮುಖ್ಯ ಗುರಿಯಾಗಿದೆ” ಎಂದು ಹೇಳಿದರು.

ಲೋಕಾರ್ಪಣ ಸಮಾರಂಭದಲ್ಲಿ ಶಾಸಕರಾದ ಅಶ್ವಥ್ ನಾರಾಯಣ್, ಸಾ.ರ ಗೋವಿಂದ್ ಸೇರಿದಂತೆ ಕನ್ನಡಪರ ಸಂಘಟನೆಗಳ ಪ್ರತಿನಿಧಿಗಳು, ಸಮಾಜಸೇವಕರು ಹಾಗೂ ಯುವಕರು ಉಪಸ್ಥಿತರಿದ್ದು, ನೂತನ ಸಂಘಟನೆಗೆ ಶುಭಹಾರೈಸಿದರು. ಕಾರ್ಯಕ್ರಮವು ಕನ್ನಡದ ಘೋಷಣೆಗಳು ಮತ್ತು ಒಗ್ಗಟ್ಟಿನ ಸಂದೇಶದೊಂದಿಗೆ ಸಮಾಪ್ತಿಯಾಯಿತು.
ಯುವ ಕನ್ನಡಿಗರ ಸೇನೆ ಮುಂದಿನ ದಿನಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಘಟನೆಯ ವಿಸ್ತರಣೆ, ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳು ಹಾಗೂ ಕನ್ನಡ ಹಿತಾಸಕ್ತಿ ಸಂಬಂಧಿತ ಹೋರಾಟಗಳನ್ನು ನಡೆಸಲಿದೆ ಎಂದು ತಿಳಿಸಲಾಗಿದೆ.



Post Comment