ಬೆಂಗಳೂರು: ಬಿಜೆಪಿ ಕರ್ನಾಟಕ ಅವರು ಮೂರ್ಖರು, ಲಾಭಕ್ಕೂ ಆದಾಯಕ್ಕೂ ವ್ಯತ್ಯಾಸ ತಿಳಿಯದ ದಡ್ಡ ಶಿಖಾಮಣಿಗಳು ಎಂಬುದನ್ನು ಪ್ರತಿ ಬಾರಿ ದಾಖಲೆ ಸಮೇತ ರುಜುವಾತು ಮಾಡುತ್ತಿರುತ್ತಾರೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಬಿಜೆಪಿ ಟ್ವೀಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ನಾವು ಅಂಕಿ ಅಂಶಗಳ ಮೂಲಕ ಮಾಹಿತಿ ಒದಗಿಸಿ ಇವರ ಸುಳ್ಳನ್ನು ಬಯಲಿಗೆಳೆದರೂ ಸಹ ಇವರು ಸುಧಾರಣೆ ಹೊಂದುವ ಯಾವುದೇ ಸಣ್ಣ ಕುರುಹು ಕೂಡ ಕಾಣದಿರುವುದು ವಿಷಾದನೀಯ. ತಮ್ಮ ಅವಧಿಯ ಆಡಳಿತದಲ್ಲಿ ಸಾರಿಗೆ ನೌಕರರಿಗೆ ಒಳ್ಳೆಯದನ್ನು ಮಾಡುವ ಯಾವುದೇ ನೀತಿ, ಕಾರ್ಯಕ್ರಮ ಅನುಷ್ಠಾನಗೊಳಿಸದೆ, 15 ದಿವಸ ಸಾರಿಗೆ ಮುಷ್ಕರ ಆಗಲು ಕಾರಣರಾದ ನೀವು ಇಂದು ಪತ್ರಿಕಾಗೋಷ್ಠಿ ನಡೆಸಿ ಅವರ ಪರವಾಗಿ ಮಾತನಾಡುವ ಯಾವ ನೈತಿಕತೆ ನಿಮಗಿದೆ. ಇವತ್ತಿನ ಸಾರಿಗೆ ಸಂಸ್ಥೆಗಳ ಅಧೋಗತಿಗೆ ನೀವೇ ಕಾರಣ ಅದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಬಿಜೆಪಿ ಟ್ವೀಟ್ ಗೆ ಕೌಂಟರ್ ಕೊಟ್ಟಿದೆ.
ತಾವು ಅಧಿಕಾರದಲ್ಲಿದ್ದಾಗ ಸಾರಿಗೆ ನೌಕರರನ್ನು ಕಣ್ಣೀರು ಹಾಕಿಸಿ ಸುಮಾರು 3000 ನೌಕರರನ್ನು ವಜಾ, ಅಮಾನತ್ತುಗೊಳಿಸಿ ನೌಕರರ ಕುಟುಂಬಗಳನ್ನು ಬೀದಿಗೆ ತಂದದ್ದನ್ನು ಮರೆತುಬಿಟ್ಟಿರಾ? ಇನ್ನು ಸಹ ಅವರು ಕೋರ್ಟ್ ಕಛೇರಿ ಅಲೆದಾಡುತ್ತಿದ್ದಾರೆ. ಈಗ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಮೊಸಳೆ ಕಣ್ಣೀರು ಸುರಿಸುವ ನಿಮಗೆ ನಾಚಿಕೆಯಿಲ್ಲವೇ?. ಬಿ.ಜೆ.ಪಿ ಸರ್ಕಾರ ಬಿಟ್ಟು ಹೋಗಿದ್ದ ರೂ. 5900 ಕೋಟಿ ನಷ್ಟದಿಂದ ಹೊಣೆಗಾರಿಕೆ ಬಾಕಿಗಳಾದ ಡೀಸೆಲ್ ಹಣ, ಸಿಬ್ಬಂದಿಗಳ ಭವಿಷ್ಯ ನಿಧಿ , ಖರೀದಿ ಸಾಮಾಗ್ರಿಗಳ ಹಣ ಸೇರಿ ಎಲ್ಲಾ ಬಾಕಿ ಗಳನ್ನು ತೀರಿಸುವ ಹೊಣೆಗಾರಿಕೆ ಹೊತ್ತುಕೊಂಡು ನಾವು ಸಂಸ್ಥೆಗಳನ್ನು ಮುನ್ನಡೆಸಬೇಕಾಗಿದೆ ಎಂದು ಕಾಂಗ್ರೆಸ್ ಹೇಳಿದೆ.
ತಮ್ಮ ಪಕ್ಷ 2023 ಮಾರ್ಚ್ ನಲ್ಲಿ 38 ತಿಂಗಳುಗಳ ನಂತರ ಸಂಬಳ ಏರಿಕೆ ಮಾಡಿ, ಏರಿಕೆಯಾದ ಸಂಬಳದ 38 ತಿಂಗಳ ಅರಿಯರ್ಸ್ ಸಿಬ್ಬಂದಿಗಳಿಗೆ ನೀಡದೆ, ಅದಕ್ಕೆ ಬೇಕಾದ ಅನುದಾನವನ್ನು ನೀಡದೆ, ನಿವೃತ್ತಿ ಹೊಂದಿದ 11694 ಸಿಬ್ಬಂದಿಗಳಿಗೆ ಉಪಧನ ಮತ್ತು ಗಳಿಕೆ ರಜೆ ಬಾಕಿ ಹಣವನ್ನು ನೀಡದೆ ನಾವು ಕಳೆದ ವಾರ ರೂ. 224.05 ಕೋಟಿ ಪಾವತಿಸಿದ್ದೇವೆ. ಶಕ್ತಿ ಯೋಜನೆಗೆ ಸಂಬಂಧಪಟ್ಟಂತೆ ಸರ್ಕಾರವು ಕೆಎಸ್ಆರ್ಟಿಸಿಗೆ – ರೂ.2481 ಕೋಟಿ, ಬಿಎಂಟಿಸಿಗೆ – ರೂ. 1126 ಕೋಟಿ, ವಾಯುವ್ಯ ಸಾರಿಗೆಗೆ – ರೂ 1613 ಕೋಟಿ . ಕಲ್ಯಾಣ ಕರ್ನಾಟಕ ಸಾರಿಗೆಗೆ- ರೂ 1321 ಕೋಟಿ ರೂ. ಅನುದಾನ, ಒಟ್ಟು ನಾಲ್ಕೂ ಸಾರಿಗೆ ಸಂಸ್ಥೆಗಳಿಗೆ ರೂ 6543 ಕೋಟಿ ಅನುದಾನವನ್ನು ಸರ್ಕಾರ 2023ರ ಜೂನ್ನಿಂದ 2024ರ ನವೆಂಬರ್ವರೆಗೆ ಬಿಡುಗಡೆ ಮಾಡಿದೆ. ಸಾರಿಗೆ ಸಂಸ್ಥೆಗಳಲ್ಲಿ ಬಿಟ್ಟುಹೋಗಿರುವ ರೂ. 5900 ಕೋಟಿ ಸಾಲ, ಭವಿಷ್ಯ ನಿಧಿ ಹಣ ಪಾವತಿ ಬಾಕಿ, ಗ್ರಾಜ್ಯುಟಿ ಹಣ ಬಾಕಿ, ಶೂನ್ಯ ನೇಮಕಾತಿ, ಶೂನ್ಯ ಹೊಸ ಬಸ್ಸುಗಳ ಸೇರ್ಪಡೆ, ಶೂನ್ಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಾವು ಮತ್ತೊಂದು ಪತ್ರಿಕಾಗೋಷ್ಠಿ ಮಾಡಿ ಚರ್ಚೆಗೆ ಆಹ್ವಾನಿಸಿದರೆ ಮುಖಾಮುಖಿಯಾಗಿ ಮಾತನಾಡೋಣ ಎಂದಿದೆ.
ಸಾರಿಗೆ ನೌಕರರ ಹಿತಕಾಯುವಲ್ಲಿ ನಾವು ಬದ್ಧತೆ ಹೊಂದಿದ್ದೇವೆ. ತಮ್ಮ ಅವಧಿಯ ಸಾಲದ ಹೊರೆಯಿಂದ ಹೊರಬರಲು ಶತ ಪ್ರಯತ್ನ ಮಾಡುತ್ತಿದ್ದೇವೆ. ನಿಮ್ಮ ಆಡಳಿತದ ಅವಧಿಯೇ ಸಾರಿಗೆ ಸಂಸ್ಥೆಗಳಿಗೆ ದುರಂತವಾಗಿ, ಶಾಪವಾಗಿ ಪರಿಣಮಿಸಿದೆ ಎಂದು ಕಾಂಗ್ರೆಸ್ ಟಾಂಗ್ ಕೊಟ್ಟಿದೆ.
Post Comment