×

ಕಣ್ಣಿನ ಆರೋಗ್ಯದ ಬಗ್ಗೆ ಜನಜಾಗೃತಿ ಅಗತ್ಯ: ಯು.ಟಿ. ಖಾದರ್‌

ಮಂಗಳೂರು: ಗ್ರಾಮೀಣ ಪ್ರದೇಶಗಳಲ್ಲಿ ಕಣ್ಣಿನ ಆರೋಗ್ಯದ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ ಎಂದು ಕರ್ನಾಟಕ ವಿಧಾನಸಭೆಯ ಸ್ಪೀಕರ್‌ ಯು.ಟಿ. ಖಾದರ್‌ ಅಭಿಪ್ರಾಯಪಟ್ಟರು.
ಮಂಗಳೂರಿನಲ್ಲಿ ಶುಕ್ರವಾರ ಆರಂಭಗೊಂಡ ಡಾ. ಅಗರ್ವಾಲ್ಸ್‌ ಕಣ್ಣಿನ ಆಸ್ಪತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಣ್ಣು ನಮ್ಮ ಆರೋಗ್ಯದ ಬಹಳ ಮುಖ್ಯ ಭಾಗ. ಆದರೆ ನಾವು ಅದರ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ. ಸಮಸ್ಯೆ ಬಂದಾಗ ಮಾತ್ರವೇ ವೈದ್ಯರ ಬಳಿ ಹೋಗುತ್ತೇವೆ. ಆದರೆ ಯಾವುದೇ ಕಾಯಿಲೆಯನ್ನು ಗುಣಪಡಿಸುವುದಕ್ಕಿಂತ ಅದು ಬಾರದಂತೆ ತಡೆಯುವುದೇ ಒಳ್ಳೆಯದು. ಹಾಗಾಗಿ ಆಸ್ಪತ್ರೆಗಳು ಕಣ್ಣಿನ ಆರೋಗ್ಯದ ಮಹತ್ವದ ಬಗ್ಗೆ ಜನಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.


ತಾವು ಆರೋಗ್ಯ ಸಚಿವರಾಗಿದ್ದಾಗ ಆರಂಭಿಸಿದ ವಿಷನ್‌ ಕಮಿಟಿಯ ಕಾರ್ಯವೈಖರಿಯನ್ನು ಪ್ರಸ್ತಾಪಿಸಿದ ಅವರು “ಮಂಗಳೂರು ಎಂದಿಗೂ ಗುಣಮಟ್ಟದ ಆರೋಗ್ಯಸೇವೆ ಮತ್ತು ಶಿಕ್ಷಣಕ್ಕೆ ಹೆಸರಾಗಿದೆ. ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್ ಈಗ ಇಲ್ಲಿ ಆರಂಭವಾಗಿದ್ದು, ನಮ್ಮ ಜನರಿಗೆ ವಿಶ್ವದರ್ಜೆಯ ಕಣ್ಣಿನ ಆರೈಕೆ ಸಿಗುವಂತಾಗಿದೆ. ಕಣ್ಣಿನ ಸಮಸ್ಯೆಯನ್ನು ತಡೆಯುವ ಮತ್ತು ಸಮಯಕ್ಕೆ ಸರಿಯಾಗಿ ಸಂಕೀರ್ಣ ಕಣ್ಣಿನ ಅನಾರೋಗ್ಯವನ್ನು ತಡೆಯುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ” ಎಂದು ತಿಳಿಸಿದರು.
ದೇಶಾದ್ಯಂತ 400ಕ್ಕೂ ಹೆಚ್ಚು ಕಣ್ಣಿನ ಆಸ್ಪತ್ರೆಗಳನ್ನು ಹೊಂದಿರುವ ಡಾ. ಅಗರ್ವಾಲ್ಸ್‌ ಐ ಹಾಸ್ಪಿಟಲ್‌ ಮೊದಲ ಬಾರಿಗೆ ಕರಾವಳಿಗೆ ಕಾಲಿಟ್ಟಿದ್ದು, ಮಂಗಳೂರಿನ ಪಂಪ್‌ವೆಲ್‌ ವೃತ್ತದ ಬಳಿಕ ಅತ್ಯಾಧುನಿಕ ಕಣ್ಣಿನ ಆಸ್ಪತ್ರೆ ಆರಂಭಿಸಿದೆ. 15,000 ಚದರಡಿ ವಿಸ್ತೀರ್ಣ ಹೊಂದಿರುವ ಹೊಸ ಆಸ್ಪತ್ರೆಯು ಹೊಸ ತಲೆಮಾರಿನ ಡಯಾಗ್ನಾಸ್ಟಿಕ್ ಮತ್ತು ಸರ್ಜಿಕಲ್ ಟೆಕ್ನಾಲಜಿಯನ್ನು ಒಳಗೊಂಡಿದೆ. ಕಣ್ಣಿಗೆ ಸಂಬಂಧಿಸಿದಂತೆ ವಿವಿಧ ಸೂಪರ್ ಸ್ಪೆಷಾಲಿಟಿ ಸೇವೆಯು ಒಂದೇ ಕಡೆ ಸಿಗುತ್ತಿದೆ. ಇದರೊಂದಿಗೆ ಕರ್ನಾಟಕದಲ್ಲಿ ಒಟ್ಟು ಆಸ್ಪತ್ರೆಗಳ ಸಂಖ್ಯೆ 33ಕ್ಕೆ ಏರಿದೆ.
ಆಸ್ಪತ್ರೆಯಲ್ಲಿ ಅತ್ಯಾಧುನಿಕ ಡಯಾಗ್ನಾಸ್ಟಿಕ್ ಮತ್ತು ಸರ್ಜಿಕಲ್ ಸಲಕರಣೆಗಳು ಇವೆ. ಒಸಿಟಿ, ರೆಟಿನಾ ಲೇಸರ್ ಸಿಸ್ಟಮ್, ಕಾರ್ನಿಯಲ್ ಟೋಪೋಗ್ರಫಿ, ಆಪ್ಟಿಕಲ್ ಬಯೋ ಮೋಟರ್ ಝೀಸ್ ಮೈಕ್ರೋಸ್ಕೋಪ್ ಆಧರಿತ ಸರ್ಜಿಕಲ್ ಪ್ಲಾಟ್‌ಫಾರಂಗಳು ಇದರಲ್ಲಿವೆ. ದಿನಕ್ಕೆ 500 ರೋಗಿಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಆಪರೇಶನ್ ಥಿಯೇಟರ್, ಇನ್ ಹೌಸ್ ಆಪ್ಟಿಕಲ್ಸ್, ಲ್ಯಾಬ್, ಫಾರ್ಮಸಿ, ಜಿಎ ಬ್ಯಾಕಪ್, ಆಂಪಲ್ ಪಾರ್ಕಿಂಗ್ ಮತ್ತು ಸುಧಾರಿತ ತನಿಖಾ ಸೂಟ್‌ಗಳನ್ನು ಇದು ಹೊಂದಿದೆ.
ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್‌ನ ಚಿಕಿತ್ಸಾ ಸೇವೆಗಳ ಪ್ರಾದೇಶಿಕ ಮುಖ್ಯಸ್ಥ ಡಾ. ಶ್ರೀನಿವಾಸ ರಾವ್ ಮಾತನಾಡಿ “ಹೊಸ ಆಸ್ಪತ್ರೆಯು ಕೇವಲ ಕಣ್ಣಿನ ರೋಗಗಳಿಗೆ ಚಿಕಿತ್ಸೆ ನೀಡುವುದಷ್ಟೇ ಅಲ್ಲ, ಸಮಸ್ಯೆಯನ್ನು ಮೊದಲೇ ಪತ್ತೆ ಮಾಡುವುದು, ತಡೆಯುವುದು ಮತ್ತು ಜಾಗೃತಿಯನ್ನು ಮೂಡಿಸುವ ಕೆಲಸವನ್ನೂ ಮಾಡುತ್ತದೆ. ಜೀವನಶೈಲಿಗೆ ಸಂಬಂಧಿಸಿದ ಕಣ್ಣಿನ ಸಮಸ್ಯೆಗಳು ಮತ್ತು ಮಯೋಪಿಯಾ ಹೆಚ್ಚುತ್ತಿರುವುದರಿಂದ, ವಯಸ್ಕರು ಮತ್ತು ಮಕ್ಕಳ ಕಣ್ಣಿನ ಆರೋಗ್ಯವನ್ನು ರಕ್ಷಿಸುವಲ್ಲಿ ನಮ್ಮ ಆಸ್ಪತ್ರೆಯು ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ಆಸ್ಪತ್ರೆಯಲ್ಲಿ ಮೂವರು ಸ್ಪೆಷಲಿಸ್ಟ್ ವೈದ್ಯರ ತಂಡವಿದೆ” ಎಂದರು.
ಈ ವಿಸ್ತರಣೆಯ ಬಗ್ಗೆ ಮಾತನಾಡಿದ ಡಾ. ಅಗರ್ವಾಲ್ಸ್ ಗ್ರೂಪ್ ಆಫ್ ಐ ಹಾಸ್ಪಿಟಲ್ಸ್‌ನ ಸಿಒಒ ರಾಹುಲ್ ಅಗರ್ವಾಲ್ ಮಾತನಾಡಿ “ಮಂಗಳೂರಿನಲ್ಲಿ ಉತ್ತಮ ವೈದ್ಯಕೀಯ ವ್ಯವಸ್ಥೆಯಿದ್ದು, ಹಲವು ಪ್ರತಿಷ್ಠಿತ ಸಂಸ್ಥೆಗಳಿವೆ. ಆದರೆ, ಸುಧಾರಿತ ಆಪ್ತಾಲ್ಮಿಕ್ ಸೇವೆಗಳ ಕೊರತೆಯಿದೆ. ಕೈಗೆಟಕುವ ಮತ್ತು ಸುಲಭ ಲಭ್ಯ ಅತ್ಯಾಧುನಿಕ ಕಣ್ಣಿನ ಆರೈಕೆಯನ್ನು ಒದಗಿಸುವಲ್ಲಿ ಇರುವ ಕೊರತೆಯನ್ನು ನೀಗಿಸುವುದು ನಮ್ಮ ಗುರಿಯಾಗಿದೆ” ಎಂದು ಹೇಳಿದರು.
ಆಸ್ಪತ್ರೆಯು ಸೆಪ್ಟೆಂಬರ್ ೩೦ರವರೆಗೆ ಉಚಿತ ಸಮಗ್ರ ಕಣ್ಣಿನ ತಪಾಸಣೆಯನ್ನು ನಡೆಸುತ್ತಿದೆ. ಜೊತೆಗೆ, ನಿಯಮಿತವಾಗಿ ಕಣ್ಣಿನ ತಪಾಸಣೆಗಳ ಕ್ಯಾಂಪ್‌ಗಳನ್ನು ದಕ್ಷಿಣ ಕನ್ನಡ ರಾಜ್ಯದ ಎಲ್ಲೆಡೆ ಆಯೋಜಿಸಲಾಗುತ್ತದೆ.
ಶಾಸಕ ಡಾ. ವೇದವ್ಯಾಸ ಕಾಮತ್ ಅವರು ಹಾಜರಿದ್ದರು. ಮಂಗಳೂರಿನ ಐಎಂಎ ಅಧ್ಯಕ್ಷ ಡಾ. ಜೆಸ್ಸಿ ಮರಿಯಾ ಗೊವೆಯಸ್ ಡಿಸೋಝಾ, ಆರೋಗ್ಯ ಸೇವೆಗಳ ವಿಭಾಗದ ಹಿರಿಯ ಮ್ಯಾನೇಜರ್ ಮತ್ತು ಎಂಆರ್‌ಪಿಎಲ್‌ನ ಸಿಎಂಒ ಲೆ. ಕರ್ನಲ್ ಡಾ. ಝಹೀದ್ ಅಲಿ ಖಾನ್, ಆಸ್ಪತ್ರೆಯ ಆಪರೇಷನ್ಸ್‌ ಉಪಾಧ್ಯಕ್ಷರಾದ ಧೀರಜ್, ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ. ಅದಿತಿ ಎಸ್‌., ಡಾ. ದೀಪ್ತಾ ಇನ್ನಿತರರು ಉಪಸ್ಥಿತರಿದ್ದರು.

Voice of Karnataka is a premier Kannada news portal dedicated to delivering timely and relevant news to our readers. Under the leadership of News Editor Irfan Uppinangady, we focus on providing in-depth coverage and diverse perspectives on local, national, and global issues. Committed to integrity and excellence in journalism, we strive to be the voice of the community, keeping our audience informed and engaged.

Post Comment

You May Have Missed