ಬೆಂಗಳೂರು: ಕರ್ನಾಟಕದ ಕಲೆ, ಸಂಸ್ಕೃತಿಯನ್ನು ಸಾರುವ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸಿಗಲಿದೆ ವಿಶೇಷ ಸನ್ಮಾನ ಕನ್ನಡಿಗರ ಹೆಮ್ಮೆಯ “ಕೆಂಪೇಗೌಡ ಉತ್ಸವ”ವು ದುಬೈನ ಪ್ರತಿಷ್ಠಿತ ರಿಟ್ಸ್ ಕಾರ್ಟನ್ ಹೋಟೆಲ್ ನ ಆವರಣದಲ್ಲಿ ಬರುವ ಅಕ್ಟೋಬರ್ 27-2024 ರಂದು ಅದ್ಧೂರಿಯಾಗಿ ಜರುಗಲಿದ್ದು, ಕನ್ನಡಿಗರು ಹಾಗೂ ಸ್ಥಳೀಯರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ಸಜ್ಜಾಗಿದ್ದಾರೆ. ಕ್ರೀಡೆ, ಶಿಕ್ಷಣ, ಉದ್ಯಮ, ಮತ್ತು ಕಲಾ ಕ್ಷೇತ್ರಗಳಲ್ಲಿ ಸಾಧನೆಗೈದ ವಿಶೇಷ ಸಾಧಕರಿಗೆ ಸನ್ಮಾನವನ್ನು ಸಹ ಈ ಬಾರಿ ನೀಡಲಾಗುವುದು.
ದುಬೈ, ದಿನೇ ದಿನೇ ಬೆಳೆಯುತ್ತಿರುವ ದೇಶ. ಪ್ರವಾಸೋಧ್ಯಮವು ಈ ದೇಶದಲ್ಲಿ ಈಗ ಪ್ರಮುಖ ಉದ್ಯಮವಾಗಿ ಬದಲಾಗಿದ್ದು, ರಿಯಲ್ ಎಸ್ಟೇಟ್ ಸೇರಿದಂತೆ ಅನೇಕ ಉದ್ಯಮಗಳು ಮರಳುಗಾಡಿನಲ್ಲಿ ಈಗ ತಲೆ ಎತ್ತಿ ನಿಂತಿವೆ. ಪ್ರಪಂಚದಾದ್ಯಂತ ಹಲವರು ದುಬೈಗೆ ಬಂದು ನೆಲೆಸಿದ್ದಾರೆ. ಈ ದೇಶದಲ್ಲಿ ಕನ್ನಡಿಗರು ಕೂಡ ತಮ್ಮದೇ ಆದ ಸ್ಥಾನ ಹೊಂದಿದ್ದು, ಅರಬ್ ನಾಡಿನಲ್ಲಿ ಸಾವಿರಾರು ಕುಟುಂಬಗಳು ನೆಲೆ ಕಂಡುಕೊಂಡಿದ್ದಾರೆ.
ಕನ್ನಡಿಗರ ಹೆಮ್ಮೆ ದುಬೈನಲ್ಲಿ:
ಇನ್ನು ಈ ಐತಿಹಾಸಿಕ ಉತ್ಸವವನ್ನು ಬಾಲಗಂಗಾಧರನಾಥ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಆಯೋಜಿಸಲಾಗುತ್ತಿದ್ದು, ಕರ್ನಾಟಕದ ಸಚಿವರು, ಉದ್ಯಮಿಗಳು, ಸಿನಿಮಾ ತಾರೆಯರು, ಮತ್ತು ವಿವಿಧ ಗಣ್ಯ ವ್ಯಕ್ತಿತ್ವಗಳು ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಲ್ಲದೆ, ಕರ್ನಾಟಕದ ಸಂಸ್ಕೃತಿ, ಕಲೆ, ಮತ್ತು ಪರಂಪರೆಯನ್ನು ಪ್ರದರ್ಶಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ದುಬೈನ ಕನ್ನಡಿಗರು ಹಾಗೂ ಅಂತರರಾಷ್ಟ್ರೀಯ ವೀಕ್ಷಕರನ್ನು ಆಕರ್ಷಿಸಲಿವೆ.
ಈ ಬಾರಿಯ ಕೆಂಪೇಗೌಡ ಉತ್ಸವವನ್ನು ದುಬೈನಲ್ಲಿ ಆಚರಿಸುವ ಜೊತೆಗೆ ದುಬೈನ ಅದ್ಬುತಗಳನ್ನು ಸಹ ಕನ್ನಡಿಗರು ಕಣ್ತುಂಬಿಕೊಳ್ಳಲು ಸಹ ವ್ಯವಸ್ಥೆಮಾಡಲಾಗಿದೆ . ಆ ಮೂಲಕ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಉತ್ಸವನ್ನು ಸಾಗರದಾಚೆಯ ದುಬೈನಲ್ಲೂ ಈಗ ನೀವು ಈ ಮೂಲಕ ನೋಡಬಹುದು ಎಂದು ಒಕ್ಕಲಿಗರ ಸಂಘ ದುಬೈ ಇದರ ಅಧ್ಯಕ್ಷರಾದ ಕಿರಣ್ ಗೌಡ ಮಾಹಿತಿ ನೀಡಿದ್ದಾರೆ.
ಕೆಂಪೇಗೌಡರು ಕನ್ನಡಿಗರ ಹೆಮ್ಮೆಯ ಪ್ರತೀಕ. ದುಬೈನಲ್ಲಿ ನಡೆಯುತ್ತಿರುವ ಈ ಉತ್ಸವ ಕನ್ನಡಿಗರ ಸಂಬಂಧವನ್ನು ಮತ್ತಷ್ಟು ಹೆಚ್ಚಿಸುವ ಮಹತ್ತರ ಅವಕಾಶ. ಈ ಉತ್ಸವವು ದುಬೈನಲ್ಲಿನ ಕನ್ನಡಿಗರಿಗೆ ಮಾತ್ರವಲ್ಲ, ಇಡೀ ಪ್ರಪಂಚದಾದ್ಯಂತ ಕನ್ನಡಿಗರಿಗೆ ಹೊಸ ಸಂದೇಶವನ್ನು ನೀಡಲಿದೆ. ನಮ್ಮ ಕಲೆ, ಸಂಸ್ಕೃತಿ, ಮತ್ತು ಪರಂಪರೆಯನ್ನು ಸಡಗರದಿಂದ ಆಚರಿಸುತ್ತಿರುವುದು ನಮಗೆ ಸಂತೋಷವನ್ನು ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ.



Post Comment