ರಾಜ್ಯದಲ್ಲಿ ವಾಹನ್-4 ಪೋರ್ಟಲ್ ಮೂಲಕ “ಭಾರತ್ ಟ್ಯಾಕ್ಸಿ” ಯೋಜನೆಯನ್ನು (ಬೈಕ್ ಟ್ಯಾಕ್ಸಿ/ದ್ವಿಚಕ್ರ ವಾಹನವನ್ನು ಹೊರತುಪಡಿಸಿ) ಆಟೋ ಮತ್ತು ಟ್ಯಾಕ್ಸಿಗಳಿಗೆ ಕೂಡಲೇ ಜಾರಿಗೆ ತರಬೇಕೆಂದು ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದಿಂದ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಮನವಿ ಸಲ್ಲಿಸಲಾಗಿದೆ.
ದಿನಾಂಕ 09/02/2026 ರಂದು ಸಂಘದ ಅಧ್ಯಕ್ಷ ನಟರಾಜ್ ಶರ್ಮಾ ಹಾಗೂ ಸದಸ್ಯರು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಪತ್ರ ನೀಡಿದರು. ಖಾಸಗಿ ಅಗ್ರಿಗೇಟರ್ ವ್ಯವಸ್ಥೆಯಿಂದ ಆಟೋ ಮತ್ತು ಟ್ಯಾಕ್ಸಿ ಚಾಲಕರು ತೀವ್ರ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದು, ಪ್ರತಿ ಪ್ರಯಾಣಕ್ಕೆ 20% ರಿಂದ 35% ವರೆಗೆ ಕಮಿಶನ್ ವಸೂಲಿ ನಡೆಯುತ್ತಿರುವುದು ಚಾಲಕರಿಗೆ ಅನ್ಯಾಯವಾಗುತ್ತಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಕೇಂದ್ರ ಸರ್ಕಾರ ಆರಂಭಿಸಿರುವ “ಭಾರತ್ ಟ್ಯಾಕ್ಸಿ” ಯೋಜನೆಯನ್ನು ರಾಜ್ಯದಲ್ಲಿ ವಾಹನ್ ಪೋರ್ಟಲ್ ಮೂಲಕ ಜಾರಿಗೆ ತಂದಲ್ಲಿ ನೋಂದಣಿ, ಪರವಾನಗಿ, ವಿಮೆ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳು ಪಾರದರ್ಶಕವಾಗಲಿದ್ದು, ಪ್ರಯಾಣಿಕರ ಸುರಕ್ಷತೆಗೂ ಹೆಚ್ಚಿನ ಭರವಸೆ ಸಿಗಲಿದೆ. ಅಪಘಾತ ಅಥವಾ ಅನಾಹುತದ ಸಂದರ್ಭಗಳಲ್ಲಿ ಸೂಕ್ತ ಪರಿಹಾರ ದೊರೆಯಲಿದೆ ಎಂದು ಸಂಘವು ತಿಳಿಸಿದೆ.
ಆದರೆ ಈ ಯೋಜನೆಯಲ್ಲಿ ಬೈಕ್ ಟ್ಯಾಕ್ಸಿ ಅಥವಾ ದ್ವಿಚಕ್ರ ವಾಹನಗಳನ್ನು ಸೇರಿಸಬಾರದು ಎಂದು ಸಂಘ ಸ್ಪಷ್ಟವಾಗಿ ಮನವಿ ಮಾಡಿದ್ದು, ಇದರಿಂದ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಹಾಗೂ ಪ್ರಯಾಣಿಕರ ಜೀವಭದ್ರತೆಗೆ ಅಪಾಯ ಉಂಟಾಗುತ್ತದೆ ಎಂಬುದಕ್ಕೆ ಪೊಲೀಸ್ ವರದಿಗಳು ಪೂರಕವಾಗಿವೆ ಎಂದು ತಿಳಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಸಚಿವ ರಾಮಲಿಂಗಾ ರೆಡ್ಡಿ, “ಭಾರತ್ ಟ್ಯಾಕ್ಸಿ” ಯೋಜನೆ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಟ್ಟಿರುವುದರಿಂದ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಹಾಗೂ ಸಹಕಾರ ಸಚಿವಾಲಯ, ಭಾರತ ಸರ್ಕಾರಕ್ಕೆ ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ಪ್ರಸ್ತಾವನೆಯ ಕುರಿತು ಅಧಿಕೃತವಾಗಿ ಪತ್ರ ಬರೆಯಲಾಗುವುದು ಎಂದು ತಿಳಿಸಿದ್ದಾರೆ.



Post Comment